
ಹೊಳೆನರಸೀಪುರ: ಅಂಬೇಡ್ಕರ್ ವಾದಿಗಳು ನರಿಗಳಲ್ಲ, ಹುಲಿಗಳಾಗಿದ್ದಾರೆ ಎಂದು ಆರ್ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ಸಮತಾ ಸೈನಿಕ ದಳದ ರಾಷ್ಟ್ರಾಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಸ್ಪಷ್ಟಪಡಿಸಿದರು.ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ರಿಪಬ್ಲಿ ಪಾರ್ಟಿ ಆಫ್ ಇಂಡಿಯಾ ಮತ್ತು ಸಮತಾ ಸೈನಿಕ ದಳದ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕರ್ತರ ಸೇರ್ಪಡೆ ಹಾಗೂ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕ ದಳವು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ; ಇವು ನಿಜವಾದ ಜಾತ್ಯತೀತ ಸಂಘಟನೆಗಳಾಗಿವೆ. ದೇಶದಲ್ಲಿ ಹಲವಾರು ಸಂಘಟನೆಗಳು ಜಾತ್ಯತೀತವೆಂದು ಹೇಳಿಕೊಳ್ಳುತ್ತವೆ, ಆದರೆ ನಿಜವಾದ ಜಾತ್ಯತೀತತೆ ನಮ್ಮ ಸಂಘಟನೆಗಳಲ್ಲಿ ಮಾತ್ರ ಕಾಣಸಿಗುತ್ತದೆ ಎಂದು ಹೇಳಿದರು.ಹೊಳೆನರಸೀಪುರದಲ್ಲಿ ಕಾರ್ಯಾಲಯ ಸ್ಥಾಪನೆ ಸುಲಭದ ಕೆಲಸವಲ್ಲ. ಇದಕ್ಕಾಗಿ ಆರ್ಪಿಐ ರಾಜ್ಯಾಧ್ಯಕ್ಷ ಸತೀಶ್ ಅವರು ಅಪಾರ ಶ್ರಮ ಪಟ್ಟಿದ್ದಾರೆ. ನಾವು ನರಿಗಳಲ್ಲ, ಹುಲಿಗಳು ಎಂಬುದನ್ನು ಈ ಕಾರ್ಯಕರ್ತರ ಸಂಘಟನೆ ಸಾಬೀತುಪಡಿಸಿದೆ ಎಂದು ಅವರು ಹೇಳಿದರು.ಅಧಿಕಾರ ಪಡೆಯಲು ಕೆಲವರು ಜಾತ್ಯತೀತತೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಆದರೆ ದಲಿತರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಮುಂದೆ ಬರದೇ ಇರುವವರನ್ನು ಜಾತ್ಯತೀತರು ಎಂದು ಕರೆಯಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ಥಾಪಿಸಿದ ಈ ಸಂಘಟನೆಗಳು ಎಲ್ಲಾ ಜಾತಿ-ಜನಾಂಗಗಳನ್ನು ಮೀರಿ ಕಟ್ಟಲ್ಪಟ್ಟಿವೆ. ಯಾರಾದರೂ ಈ ಸಂಘಟನೆಗಳಲ್ಲಿ ಸೇರಿ ಪಕ್ಷವನ್ನು ಬಲಪಡಿಸಬಹುದು. ಯುವಕರು ಕಾನೂನು ಚೌಕಟ್ಟಿನಲ್ಲಿ ಸಂಘಟನೆಯನ್ನು ಕಟ್ಟಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮ ನಡೆಯದಂತೆ ಕೆಲವು ಪಟ್ಟಭದ್ರ ಶಕ್ತಿಗಳು ಪ್ರಯತ್ನಿಸಿದರೂ, ಅಂಬೇಡ್ಕರ್ ವಾದಿಗಳು, ಚಿಂತಕರು ಹಾಗೂ ಬುದ್ಧಿಜೀವಿಗಳು ಧೈರ್ಯದಿಂದ ಭಾಗವಹಿಸಿರುವುದು ಶ್ಲಾಘನೀಯ. ಇಂತಹವರು ನಿಜವಾದ ಹುಲಿಗಳು ಎಂದು ಅವರು ಹೇಳಿದರು.ಭಯಪಟ್ಟು ಕಾರ್ಯಕ್ರಮಕ್ಕೆ ಬಾರದವರು ಕುರಿಗಳಂತಿದ್ದಾರೆ. ನಾವು ಕುರಿಗಳಲ್ಲ, ಹುಲಿಗಳೆಂದು ಅರಿತು ಕಾರ್ಯಕ್ರಮಕ್ಕೆ ಬಂದಿರುವವರೇ ನಿಜವಾದ ಕಾರ್ಯಕರ್ತರು. ಇಂತಹ ಹುಲಿಗಳು ಒಂದೇ ದಿನ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತವೆ ಎಂದು ಎಚ್ಚರಿಸಿದರು.ಈ ಕಾರ್ಯಕ್ರಮದಲ್ಲಿ ಸಾವಿರಾರು ಭೀಮ ಸೈನಿಕರನ್ನು ರೂಪಿಸುವ ಶಕ್ತಿ ಅಡಗಿದೆ ಎಂದು ಹೇಳಿ, ಜಾತಿವಾದಿ ಶಕ್ತಿಗಳ ಅಡ್ಡಿಪಡಿಸುವ ಪ್ರಯತ್ನಗಳಿಗೆ ಇಂದಿನ ಭೀಮಶಕ್ತಿ ಉತ್ತರ ನೀಡಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಡಾ. ಎಂ. ವೆಂಕಟಸ್ವಾಮಿ, ಆರ್ಪಿಐ ರಾಜ್ಯಾಧ್ಯಕ್ಷ ಸತೀಶ್ ಸೇರಿದಂತೆ ಕಾರ್ಯಕರ್ತರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಆಗಮಿಸಿದರು. ಸುಮಾರು 150ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಶಾಂತ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಭೀಮ ಆರ್ಮಿಯ ಜಿಲ್ಲಾಧ್ಯಕ್ಷ ಪ್ರಸನ್ನ, ರಾಜ್ಯ ಕಾರ್ಯದರ್ಶಿ ಕವಿತಾ ಛಲವಾದಿ, ಸುರೇಖಾ, ನಿವೃತ್ತ ಎಲ್ಐಸಿ ಅಧಿಕಾರಿ ರಾಜೀವ್ ಸೇರಿದಂತೆ ಹಲವರು ಹಾಜರಿದ್ದರು.ಬಾಕ್ಸ್ . ೧ಅಂಬೇಡ್ಕರ್ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯ: ಸತೀಶ್ಹೊಳೆನರಸೀಪುರ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಸತೀಶ್ ಅವರು ಮಾತನಾಡಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕ ದಳ ಈ ದೇಶಕ್ಕೆ ಹೊಸದೇನಲ್ಲ ಎಂದು ಹೇಳಿದರು.ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಂದಿನ ಕಾಲದಲ್ಲಿಯೇ ಈ ಸಂಘಟನೆಗಳನ್ನು ಸ್ಥಾಪಿಸಿ, ದಲಿತರು ರಾಜಕೀಯವಾಗಿ ಮುಂದೆ ಬರಬೇಕೆಂಬ ಆಶಯದಿಂದ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದ ಮಹಾನ್ ನಾಯಕರು. ಸಮತಾವಾದ ಹಾಗೂ ಸಮಾನ ಸಮಾಜ ನಿರ್ಮಾಣವೇ ಅವರ ಉದ್ದೇಶವಾಗಿದ್ದು, ಅದಕ್ಕಾಗಿ ರಿಪಬ್ಲಿಕನ್ ಪಕ್ಷ ಮತ್ತು ಸಮತಾ ಸೈನಿಕ ದಳವನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಎಲ್ಲಾ ಜಾತಿ, ಜನಾಂಗ ಹಾಗೂ ಧರ್ಮದವರನ್ನು ಒಗ್ಗೂಡಿಸಿಕೊಂಡು ರಾಜಕೀಯವಾಗಿ ಮುನ್ನಡೆಸುವ ತಳಹದಿಯನ್ನು ಅಂಬೇಡ್ಕರ್ ಹಾಕಿಕೊಟ್ಟಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ರಿಪಬ್ಲಿಕನ್ ಪಕ್ಷದ ಮೂಲಕ ಎಂಎಲ್ಎ ಹಾಗೂ ಎಂಪಿಗಳಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆಗಳಿವೆ. ಇತ್ತೀಚೆಗೆ ಪಕ್ಷ ಮತ್ತಷ್ಟು ಬಲಿಷ್ಠವಾಗುತ್ತಿದ್ದು, ಯುವಕರು ಸಂಘಟನೆಯನ್ನು ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.ಶೋಷಿತ ಸಮುದಾಯದವರು ರಾಜಕೀಯ ಅಧಿಕಾರ ಹಿಡಿಯಬೇಕು ಎಂಬುದು ಅಂಬೇಡ್ಕರ್ ಅವರ ಕನಸಾಗಿತ್ತು. 1936ರಲ್ಲಿಯೇ ಅವರು ಈ ದಾರಿಯನ್ನು ತೋರಿಸಿ, ರಾಜಕೀಯವಾಗಿ ಮುಂದುವರೆಯಲು ಸಹಕಾರ ನೀಡಿದ್ದರು. ಅವರ ಕನಸನ್ನು ನನಸು ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಸತೀಶ್ ತಿಳಿಸಿದರು.ಬಾಕ್ಸ್ . ೨ಸಂವಿಧಾನ ಗೌರವಿಸುವವರೇ ಪಕ್ಷ ಕಟ್ಟಲು ಸಾಧ್ಯ ಡಾ. ಎಂ ವೆಂಕಟಸ್ವಾಮಿ ಹೊಳೆನರಸೀಪುರ: ಸಂವಿಧಾನವನ್ನು ಗೌರವಿಸುವ ಹಾಗೂ ದಲಿತ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮತ್ತು ಸಮತಾ ಸೈನಿಕ ದಳಕ್ಕೆ ಸೇರ್ಪಡೆಯಾಗಿ ದುಡಿಯುವವರೇ ಪಕ್ಷವನ್ನು ಬಲಪಡಿಸಲು ಸಾಧ್ಯ ಎಂದು ಮುಖಂಡರು ಹೇಳಿದರು.ಸಂವಿಧಾನದ ಮೌಲ್ಯಗಳನ್ನು ಒಪ್ಪಿಕೊಂಡು ಗೌರವಿಸುವ ಎಲ್ಲರೂ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದು ಸಂಘಟನೆಯ ಬಲವರ್ಧನೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.ರಾಜಕೀಯ ಪೈಪೋಟಿ ಹೆಚ್ಚು ಇರುವ ತಾಲೂಕಿನಲ್ಲಿ ಕಚೇರಿ ಸ್ಥಾಪನೆಯಾಗಿರುವುದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯ ಸಂಕೇತವಾಗಿದೆ. ಇದೇ ಮಾದರಿಯಲ್ಲಿ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕುಗಳಲ್ಲಿ ಕಾರ್ಯಕರ್ತರ ಸೇರ್ಪಡೆ ಹೆಚ್ಚಿಸಿ, ಪಕ್ಷದ ಕಚೇರಿಗಳನ್ನು ಸ್ಥಾಪಿಸುವ ಕಾರ್ಯ ಮುಂದುವರಿಯಬೇಕು ಎಂದು ಕರೆ ನೀಡಿದರು.